ಶನಿವಾರ, ಡಿಸೆಂಬರ್ 22, 2012

ಜಲ ನೆಲ ಮುಗಿಲು

ದುಮ್ಮಿಕ್ಕುವ ಜಲಧಾರೆಯಲ್ಲಿ ನಿಂತು,
ಮುಗಿಲತ್ತ  ದೃಷ್ಟಿಸಿದಾಗ
ಕಣ್ಣ ತುಂಬಾ ಮುಗಿಲ ಮಿಂಚು.
ಅದೋ ಅಲ್ಲಿ ಜ್ವಲಿಸುವ ಸೂರ್ಯ,
ಬಾನೆತ್ತರದ ಅಗ್ನಿ ಬಿಂಬ .
ಸುರಿವ ಕೆಂಡ, ಮತ್ತೆ ಪ್ರಜ್ವಲಿಸುವ
ಸೂರ್ಯಕಾಂತಿ.

ಅಲ್ಲಿಯೇ ನಿಂತು  ಮೊಗೆದು ಕುಡಿದ  ಜಲ
ನನ್ನಾಳದಲ್ಲಿ ಇಂಗಿಹೊಯಿತಲ್ಲ!

ಬಿನ್ನಾಣದ ಸೃಷ್ಟಿ,
ಲಯದ ಸ್ವಪ್ನದ ಕನವರಿಕೆಯಲ್ಲಿ,
ನನ್ನದೆನ್ನದ ಮೋಹದ ಹುಚ್ಚು ಹೊಳೆ ,
ಅಲ್ಲಿಯೇ ಐಕ್ಯವಾಯಿತೆ ಜಲ?

ಬನ್ನಿ ಬಂಗಾರವ ಬೆಳೆಯೋಣ ,
ಬಂಗಾರವನ್ನೇ ಬಿತ್ತೋಣ .
ಜಗದಗಲ ಮುಗಿಲಗಲ ,
ಸರ್ವ ಸಮಷ್ಟಿಯ ಪಾಲಾಗೋಣ.

ಅದೇ ಜಲ ,ನೆಲ,ಮುಗಿಲು,
ಮತ್ತೆಲ್ಲಿಯ ಭ್ರಾಂತಿ?







ಬುಧವಾರ, ಅಕ್ಟೋಬರ್ 31, 2012

ಭೇಟಿ

ಒಂದು ಕ್ಷಣದ  ಭೇಟಿ,
ಒಂದು ಮಂದಹಾಸ ,
ಮುಗುಳುನಗು,
ಮತ್ತೆ ವಿದಾಯ.

ಎಲ್ಲೋ  ಕಂಡ ನೆನಪು
ತಲೆ ತುಂಬಾ ಮರವು,
ಮಧ್ಯದಲ್ಲೆಲ್ಲೋ  ಇಣುಕಿದ
ಮುಖ.

ಅಡಗಿ ಕುಳಿತ ಕೋಗಿಲೆ
ಕುಹೂ ಎಂದ ನೆನಪು.
ಎಂದೋ ಜಾತ್ರೆಯಲ್ಲಿ
ಸರಿದು ಹೋದ ಸುಂದರಿ.

ಮತ್ತೆ ಭೋರೆಂಬ ಮಳೆಯಲ್ಲಿ ,
ಕೊಡೆಯಡಿಯಲ್ಲಿ ಮರೆಯಾದ  ಮುಖ.
ಸಹಪಾಟಿಗಳೆಡೆಯಲ್ಲಿ ಕದ್ದು
ನೋಡಿದ ಕಣ್ಣು.

ಸಂಜೆ ನೋಟದ  ಕೆಂಪು
ದಿಕ್ಕೆಟ್ಟ ಮೋಡಗಳ
ಪಯಣ,
ದಾರಿಯುದ್ದಕ್ಕೂ ಸುರಿದ
ಪಾರಿಜಾತ.

ಅಲ್ಲೇ ಕಂಡ ಕಣ್ಣಿಗೆ,
ಮರೆತ ಮನಸಿಗೆ,
ಒಂದು ಕ್ಷಣದ
ರೋಮಾಂಚನ.

ಮತ್ತೆ ಮೌನ ಬಂಗಾರ .



ಶನಿವಾರ, ಸೆಪ್ಟೆಂಬರ್ 29, 2012

ಹೂ ಬಳ್ಳಿ

ಅಂಗಳದ ತುಂಬಾ ಬಿರಿದ ಹೂವ ಪರಿಮಳ,
ಕಣ್ಣ ತುಂಬುವ ಕಾಮನಬಿಲ್ಲು.
ಅಲ್ಲಿ ಇಲ್ಲಿ ಕಾಣದ ಸತ್ಯ ,
ನಮ್ಮೆದುರ ಸಾಕ್ಷಾತ್ಕಾರ.

ನೆಲ ಬಸಿರ ಬಗೆದು,
ಬಚ್ಚಿಟ್ಟ ಚಿಪ್ಪನೊಡೆದ  ಬೀಜ.
ಸುರಿದ  ಮುಂಗಾರಿಗೆ ,
ನಳನಳಿಸಿ ಚಿಗಿತು,
ಕೇಳದೇ ನನ್ನೆದೆಯಲ್ಲಿ ,
ಪಲ್ಲವಿಸಿತು ಹರಡಿ.

ಹಚ್ಚ ಹಸಿರ  ಚಪ್ಪರ,
ತುಂಬು ನೋಟದ ಸುಖ,
ಪಲ್ಲವದ  ತುದಿಯಲ್ಲಿ,
ನಾಳೆ, ಬಯಸುವಮೊಗ್ಗು.

ಬೆಳಕಿನೊಡೆದ  ಪರಿಯಲ್ಲಿ,
ಮುಂಜಾವದ  ಮಂಜಲ್ಲಿ,
ಕಿರಣದಲ್ಲಿ  ಲಕಲಕಿಸಿತು
ನವಮಂದಾರ.

ಬೇಲಿಯಾಚೆಯ  ಕಣ್ಣು,
ಅತ್ತಿತ್ತ ಸುಳಿದಾಡುವ ಚಿಟ್ಟೆ,
ಮತ್ತೆ  ಝೇoಕರಿಸುವ  ದುಂಬಿಯಾಟ .
ಅರೆಬಿರಿದ ಮುಗುಳೊಳಗಿಂದ,
ಮಕರಂದ ಹೀರುವಾಟ .

ನನ್ನೆದೆಯಲ್ಲಿ ಹಬ್ಬಿ ಹರಡಿಯ ಬಳ್ಳಿ,
ಮನವ   ತುಂಬಿದ  ಹೂವು,
ಸುತ್ತೆಲ್ಲ ಘಮದ ಸೌಂದರ್ಯ ,
ನನ್ನ ಜಗವ ಬೆಳಗುವ ದೀಪ .

ನನ್ನ ಕ್ಷಮಿಸು ಸುಮವೇ,
ನಾಳೆಯಿಂದ, ರಕ್ಷಿಸಲಾರೆ ನಿನ್ನ.
ನನ್ನಂಗಳದ ಹೂವು,
ಮುಂಜಾನೆಯ ಮುದುಡು  ಮುಖವ
ನೋಡಲಾರೆ.

ಕ್ಷಣದ ಬದುಕು,
ದಿನದ ಸೌಂದರ್ಯ,
ಸುತ್ತೆಲ್ಲ ಘಮದ  ನಗು,
ಪಾಠವಾಗಲಿ  ನನಗೆ,
ಜೀವನದಲ್ಲಿ.







ಮಂಗಳವಾರ, ಸೆಪ್ಟೆಂಬರ್ 25, 2012

ನನ್ನೆದೆಯಲ್ಲಿ ತಾವಿಲ್ಲ

ತಾವಿಲ್ಲ ನಿನಗೆ ನನ್ನೆದೆಯಲ್ಲಿ.

ಅಲ್ಲಿ ಇಲ್ಲಿ ಅಂಡೆಲದು
ಬೆಳಂಬೆಳಗು ಕುದ್ದು ಕೊಸರಾಡಿ
ಮತ್ತೆ ಉನ್ಮತ್ತನಂತೆ
ಹರಿದಾಡಿ ಬಂದರೆ,
ತಾವಿಲ್ಲ ನನ್ನದೆಯಲ್ಲಿ.

ಅಲ್ಲಿಯೇ ಮುಗಿದ ದಿನಗಳು
ಅಂದೇ ತೀರಿದ ಬದುಕು,
ಮತ್ತೆಂದು ಉರಿಯದ ಬೆಂಕಿ,
ನನ್ನೆದೆಯಿಂದ ನಿನ್ನೆದೆಗೆ ಸಾಗಿದ
ನೆನಪು,
ಬೇಕಿಲ್ಲ ನನಗೆ,
ನನ್ನದೆಯಲ್ಲಿ ತಾವಿಲ್ಲ.

ಮತ್ತೆ ಮರುಗದ ಕರುಳು,
ಉರಿದರೂ ತಣಿಯದ ದಾಹ,
ಒಂಟಿ ನಕ್ಷತ್ರದ ಬೆಳಕು,
ಬೇಡ ನನ್ನೆದೆಯಲ್ಲಿ ,
ತಾವಿಲ್ಲ ನಿನಗೆ.

ಯಾರ ಎದೆಯಲ್ಲಿ ಸುಖವಾಗಿದ್ದೆ?
ಯಾರ ಮಡಿಲಲ್ಲಿ ಮಲಗಿದ್ದೆ/
ಯಾರ ಭಾವ ನಿನ್ನ  ಸಾಕಿತು?
ಎಂದು ತೀರಿತು ದಿನ?
ಏನೂ ಬೇಕಿಲ್ಲ ನನಗೆ,
ನನ್ನೆದೆಯಲ್ಲಿ ತಾವಿಲ್ಲ.

ಕಣ್ಣಿಗೆ ಕಾಣದ ಲೋಕ,
ಕನಸ ಕಸಿಯುವ ಸುಖ ,
ಅತ್ತು ಸೊರಗಿದ ಗಂಟಲ
ಮಂದ್ರ ಗಾನ,
ಮುದಗೊಳಿಸದೆನ್ನ ,
ಹವಣಿಸದಿರು ಇನ್ನು
ತಾವಿಲ್ಲ ನನ್ನದೆಯಲ್ಲಿ.

ಕೂತುಬಿಡು  ಬೆಂಕಿಯಲ್ಲಿ,
ಮುಳಗಿಬಿಡು ನೀರಿನಲ್ಲಿ,
ಕತ್ತಿಡು   ಬೀಸುವ ಖಡ್ಗದಡಿ
ಮತ್ತೆಂದೂ  ಬರದಿರು
ನನ್ನೆದೆಯಲ್ಲಿ ತಾವಿಲ್ಲ .

ಶುಕ್ರವಾರ, ಸೆಪ್ಟೆಂಬರ್ 7, 2012

ಧ್ಯಾನ

ಧ್ಯಾನ  ಅಂದ ಕೂಡಲೇ ಒಂದು ತರಹದ ಅಲೌಕಿಕತೆ ನಮ್ಮನ್ನು ಆವರಿಸಿಕೊಳ್ಳುತ್ತದೆ.ಈ ಧ್ಯಾನವನ್ನು

ಒಂದು ವಸ್ತು ಇಲ್ಲವೇ ದೇವರಲ್ಲಿ  ತೋರುವ ತಾದ್ಯಾತ್ಮ ಎಂದೇ ಭಾವಿಸುವುದುಂಟು. ಇಲ್ಲಿ

ವಸ್ತುವಿನ ಮೇಲಿನ ಕೇಂದ್ರಿಕೃತ ಮನಸ್ಸು ಅಲ್ಲಿಯೇ ಲೀನವಾಗತಕ್ಕದ್ದು. ಅಂದಾಗ ಒಂದು ಸಂಗತಿಯ

ಅಂತರ್ಗತ ದರ್ಶನ ನಮಗಾಗಬಹುದು.  'ಮನವೆಂಬ ಮರ್ಕಟ ' ಎಲ್ಲಿಯವರೆಗೆ ಸ್ತಿರಗೊಳಿಸಲಾಗುತ್ತದೆ

ಎನ್ನುವುದು ಧ್ಯಾನದ ಸಮಯವನ್ನು ಮತ್ತು  ಅದರ ಆಳವನ್ನು ನಿರ್ಧರಿಸುತ್ತದೆ.  ಏಕಾಂತದಲ್ಲಿ ಕುಳಿತ ವ್ಯಕ್ತಿ

ಧ್ಯಾನಾಸಕ್ತನಾಗಿದ್ದಾನೆ  ಎಂದು ನಿರ್ಣಯಿಸುವುದು ಸಾಧುವಾಗಲಾರದು. ಯೋಗಾಭ್ಯಾಸದಲ್ಲಿ  ಧ್ಯಾನಕ್ಕೆ

ಅತ್ಯುನ್ನತ  ಸ್ಥಾನವಿದೆ. ಧ್ಯಾನದಿಂದ ವ್ಯಕ್ತಿಯೊಬ್ಬ ಅಸಾಮಾನ್ಯ ಶಕ್ತಿಯನ್ನು ಪಡೆಯಬಹುದು. ಮನಸ್ಸನ್ನು

ಹತೋಟಿಯಲ್ಲಿಡಬಹುದು. ಕುಂಡಿಲಿನಿ  ಮೊದಲಾದ  ಚಕ್ರಗಳನ್ನು ಉದ್ದೀಪನಗೊಳಿಸಿ ಉನ್ನತ ಸ್ಥಾನಕ್ಕೆ

ಎರಬಹುದೆನ್ನುತ್ತದೆ  ಯೋಗ.

ಇದನ್ನು  ಸಾಧಿಸಿದ್ಧರು ನಮ್ಮ ಪೂರ್ವಜರು. ಈಗಲೂ ಧ್ಯಾನದ ಮಹತ್ವ ಕಡಿಮೆಯಾಗಿಲ್ಲ. ತಪಸ್ಸು ಈ

ಧ್ಯಾನದ  ರೂಪವಷ್ಟೇ . ಇನ್ನೂ ಅಪರಿಚಿತವಾಗಿಯೇ ಉಳಿದ ಮನಸ್ಸಿನ ಅಂತರಾಳಕ್ಕೊಂದು ಪಯಣ

ಹೊರಡುವಿರಾದರೆ ಅದು ಧ್ಯಾನದ ಮೂಲಕವೇ.

ಧ್ಯಾನ ದಿನದ ಭಾಗವಾಗಿರಲಿ.

ಶನಿವಾರ, ಸೆಪ್ಟೆಂಬರ್ 1, 2012

ನನ್ನೊಳಗಿನ್ನೊಬ್ಬ

 ಇದು ಈ ದಿನದ ಕಥೆ.

ಇಂದು ಬೆಳಿಗ್ಗೆ  ನನಗೇಕೋ  ನಾನು ಎಂದಿನತಿಲ್ಲ ಎನಿಸತೊಡಗಿತು.  ಕನ್ನಡಿ ಎದುರು ನಿಂತೆ . ಚಹರೆಯಲ್ಲಿ

ಬದಲಾವಣೆ ಕಾಣಲಿಲ್ಲ. ಹೆಂಡತಿಯನ್ನು ಕೇಳಿದೆ .ದಿಟ್ಟಿಸಿ ನೋಡಿದವಳೇ  "ನಿಮಗೆಲ್ಲೋ  ಭ್ರಮೆ" ಎಂದು

ಬಿಟ್ಟಳು.  ಮತ್ತೆ ಪ್ರಶ್ನಿಸಲು  ಧೈರ್ಯ  ಬರಲಿಲ್ಲ.  ಮೊದಲೇ ನಡುವಯಸ್ಸು  ದಾಟಿದವನು 'ಅರಳು ಮರಳು'

ಎಂದುಕೊಂಡರೆ?   ಸರಿ ಮಗನನ್ನು ಕೇಳಿದೆ. "ಏನಿಲ್ಲ, ಎಲ್ಲ ಓಕೆ " ಎಂದ.  ಆದರೆ ನನ್ನ ಮನಸ್ಸು ಒಪ್ಪುತ್ತಿಲ್ಲ.

ಏನೋ ಬದಲಾವಣೆ ಆಗಿದೆ ಎನ್ನಿಸುತ್ತಲೇ ಇತ್ತು.   ಗೆಳೆಯರನ್ನು ಕೇಳಿಯೇ ಬಿಡೋಣ ಎಂದು ಕೇಳಿದೆ.

"ಸುಮ್ನೆ ಆರಾಮಿಲ್ದಿದ್ರೆ  ಮನೇಲೆ ಇರೋದು ಬಿಟ್ಟು ಹೊರಗೆಕೋ  ಬರೋಕೊದೆ" ಎಂದುಬಿಟ್ಟರು. ಇನ್ನು

ಕೇಳಿದ್ರೆ ಹುಚ್ಚ  ಎಂದರೆ ಕಷ್ಟ ಎಂದು ತೆಪ್ಪಗೆ ಬಂದೆ.   ಆದರೂ  ಮನಸ್ಸಿನಲ್ಲಿ ಕೊರೆಯುತ್ತಲೇ ಇತ್ತು.

ಕೊನೆಯ ಪ್ರಯತ್ನವಾಗಿ  ಹಿರಿಯರೊಬ್ಬರನ್ನು  ಭೇಟಿಯಾಗಿ ಕೇಳಲು ನಿರ್ಧರಿಸಿದೆ.  ಅವರೋ ನನ್ನ ಮುಖ

ಕಾಣುತ್ತಲೇ "ಯಾಕೋ ನೀನು ಎಂದಿನಂತಿಲ್ಲ  ? ಮುಖ ಒಂತರಾ ಆಗಿದೆ, ಬಿಸ್ಲಲ್ಲಿ  ತಿರುಗ್ತಿದ್ರೆ ಇನ್ನೆನ್ನಾಗುತ್ತೆ"

ಎಂದರು.

ಅದನ್ನೇ ನಾನು ಅಂದುಕೊಳ್ತಾ ಇದ್ದೆ. ದಿನವೂ ನನ್ನೊಂದಿಗಿರುವ ನನ್ನೊಳಗಿನವ  ಇವನ್ನಲ್ಲ. ಅವನು ಇಂತಹ

ಅಸಂಬದ್ದ  ಕಥೆ ಹೇಳುತ್ತಲೇ ಇರಲ್ಲಿಲ್ಲ ಎಂದು!!!

ಸರಿ ತಾನೇ,

ಅವನು ನಾನಲ್ಲ.

ಶುಕ್ರವಾರ, ಆಗಸ್ಟ್ 31, 2012

ಮತ್ಸರ

ಮತ್ಸರವನ್ನು ನಾನು ಒಂದು ವಿಭಿನ್ನ ದೃಷ್ಟಿಯ  ಮೊಲಕ ನೋಡ ಬಯಸುತ್ತೇನೆ. ನಾವು ಮಾಡಲಸಾಧ್ಯವಾದುದ್ದನ್ನು

ಬೇರೊಬ್ಬರು ಮಾಡಿದಾಗ  ಉಂಟಾಗುವ ಕೀಳಿರಿಮೆಯೇ  ಮತ್ಸರವೆನ್ನಬಹುದು. ಅಂದರೆ ಪೈಪೋಟಿಯಲ್ಲಿ

ಅಸಾಧ್ಯವಾದಾಗ ಮೂಡುವ ಭಾವ. ಏಳಿಗೆಯನ್ನು ಸಹಿಸದ ಸ್ವಭಾವ.  ಇದು ವಯಕ್ತಿಕವಾದರೂ  ಪರಿಣಾಮ

ಘೋರವಾದೀತು . ಬೀಜಾಸುರನತೆ ಒಂದಕ್ಕೆ ಮತ್ತೊಂದು  ಜೋಡಿಸುತ್ತ  ನಾಶದತ್ತ ಮುನ್ನಡೆಸುತ್ತದೆ.

ಸ್ವನಾಶವಲ್ಲದೆ  ಪರ ನಾಶಕ್ಕೂ ಕಾರಣವಾಗುವ ಗುಣ. ಇದಕ್ಕೆ ಕಾರಣ ಸಹಿಷ್ಣುತೆಯ ಅಭಾವ. ನಾನು

ಮಾಡದ್ದನ್ನು ಬೇರೆಯವರೂ   ಮಾಡಬಾರದೆಂದ ಮನೋಸ್ಥಿತಿ.  ಕೆಲವೊಮ್ಮೆ ಇದು ಸಾಧಕವು ಆಗಬಹುದು.

ಮತ್ಸರದಲ್ಲೇ ಬೇರೆಯವರನ್ನು ಮೀರಿಸುವ ಛಲ ಮೂಡಿದರೆ ಹೆಚ್ಚಿನದನ್ನೇ ಸಾಧಿಸಲೂ ಬಹುದು.ಇಲ್ಲವೇ

ಬೇರೆಯವರನ್ನು ಹೇಗಾದರೂ  ನಾಶಮಾಡುವ ಬುದ್ಧಿ ಬಂದಿತೋ ಅದು ಸರ್ವನಾಶದ  ಮುನ್ನುಡಿ.

ಗುಣಕ್ಕಿಲ್ಲ  ಮತ್ಸರ.

ಮತ್ಸರದ ಬದಲು ಹೆಮ್ಮೆ ಬೆಳೆಸಿಕೊಳ್ಳೋಣ.


ಮಂಗಳವಾರ, ಆಗಸ್ಟ್ 28, 2012

ಗರ್ವ

ಗರ್ವವೆಂದರೆ ಯಾವ ಅರ್ಥದಲ್ಲಿ ಗ್ರಹಿಸುತ್ತೀರಿ?  ನಮ್ಮೆಲ್ಲರ  ಮನಸ್ಸಿನಲ್ಲಿ  ಗರ್ವವೆಂದರೆ ತನ್ನನ್ನೇ

ಸರ್ವಶ್ರೇಷ್ಠ  ಎಂದು ಕೊಂಡವನು . ತನ್ನನ್ನು ಬಿಟ್ಟರಿನ್ನ್ಯಾರಿಲ್ಲ  ಎಂದುಕೊಂಡವನು . ಸರಿಯಾಗಿದೆ

ಶಬ್ದ ಅದನ್ನೇ ಧ್ವನಿಸುತ್ತಿದೆ. ನಿಗರ್ವಿಯಾಗೋಣ  ಎಲ್ಲ ಸಾತ್ವಿಕರ ಕರೆ. ಎನಗಿಂತ ಕಿರಿಯರಿಲ್ಲ ಎಂದರು

ಪೂಜ್ಯರು. ಚೋದ್ಯವೆಂದರೆ ಇದೇ . ಉನ್ನತಿಯತ್ತ ಸಾಗಿದವನು ನಿಗರ್ವಿ ಯಾಗುತ್ತ ನಡೆದರೆ  ಅಲ್ಪಮತಿ

ಗರ್ವಿಯಾಗುತ್ತ  ನಡೆಯುತ್ತಾನೆ. ನನ್ನನ್ನೇ  ಆರಾಧಿಸಬೇಕೆಂದವನು  ಮುಂದಕ್ಕೆ ಸಾಗಲಾರ . ಜನರು

ತನ್ನನ್ನು  ಗಮನಿಸುತ್ತಿದ್ದಾರೆಯೇ  ಎನ್ನುವ ವಿಚಾರದಲ್ಲಿಯೇ ಅವನ ಬೆಳವಣಿಗೆ ನಿಂತಿರುತ್ತದೆ.

ಈಗ ತುಸು ಚಿಂತಿಸಿ. ಗರ್ವವೆಂದರೆ  ನಾವು ತಿಳಿದುದಕ್ಕಿಂತಲೂ  ವಿಶಾಲವಾಗಿದೆ . ನನ್ನದೆನ್ನುವ ಎಲ್ಲವೂ

ಈ ಅರ್ಥದಲ್ಲಿಯೇ ಬರುತ್ತದೆ. ಮನುಷ್ಯನಾದವನು  ತನ್ನ ಸಾಧನೆಗಳನ್ನು ,ತನ್ನ ತಿಳಿವನ್ನು

ಜಗಕ್ಕೆಲ್ಲ  ಸಾರುತ್ತಿದ್ದರೆ  ಅದು ಗರ್ವ ಎನಿಸಲಾರದು. ಅದೊಂದು ಜ್ಞಾನದಾನ . ಮಾರ್ಗ ಧೀರ್ಘವಾಗಿದೆ.

ನಮ್ಮ ಮುಂದೆ ಸಾಗುತ್ತಲೇ ಇದ್ದಾರೆ.ನಾವು  ಕ್ರಮಿಸುವುದು  ನಮ್ಮಳವಿಗೆ ಸಿಕ್ಕಿಲ್ಲ. ಎಲ್ಲಿಯವರೆಗೆ ನಮ್ಮ

ಮುಂದೆ ಸಾಗಿದವರಿದ್ದಾರೋ ಅಲ್ಲಿಯವರೆಗೆ ನಾವು ಅಲ್ಪರೆ. ಅಂದರೆ ಗರ್ವಕ್ಕೆ ಸ್ಥಾನವೆಲ್ಲಿ?

ಶತಮಾನಗಳು ಕಲಿತರು ಉಂಟು ವಿದ್ಯೆಗೆ ಕೊನೆಯೆಲ್ಲಿ?   ಹಿಮಾಲಯವನ್ನೇರಿ  ನೋಡಿ,ನಮ್ಮ ಮುಂದೆ

ಸಾವಿರಾರು ಹೆಜ್ಜೆ ಗುರಿತಿರುತ್ತದೆ.

ಗರ್ವ ಬಿಡೋಣ. ಕಿರಿಯರು ನಾವೆಲ್ಲ.

ಆತ್ಮಗೌರವವಿರಲಿ.


ಶುಕ್ರವಾರ, ಆಗಸ್ಟ್ 24, 2012

ಮೋಹ

 ಮೋಹ ಎನ್ನುವುದು ಒಂದು ವಿಶಿಷ್ಟ ಶಬ್ದ. ಕೆಲವೊಮ್ಮೆ ನಮ್ಮೊಳಗಿನದೆನ್ನನ್ನೋ   ಪ್ರಶ್ನಿಸಿದಂತಿರುತ್ತದೆ .

ಮೋಹ ಆರಂಭವಾಗುವುದೇ  ಅಪ್ರಜ್ಞಾಪೂರ್ವಕವಾಗಿ. ಕೆಲವರಿಗೆ ಧನ,ಕೆಲವರಿಗೆಕನಕ,ಭೂಮಿ,ಸ್ತ್ರೀ,

ಮನೆ, ಮಕ್ಕಳು ,ಕೀರ್ತಿ,ಪ್ರತಿಷ್ಠೆ  ಹೀಗೆ ವಿಧವಿಧವಾದ  ಮೋಹ ಕಾಡುತ್ತದೆ.ಇದು ಸರಪಳಿಯಂತೆ.

ಒಂದರ ಹಿಂದೆ ಒಂದು ಬರುತ್ತಲೇ ಇರುತ್ತದೆ. ನಿರ್ಮೋಹಿಯಾದವನು  ಪೂಜಾರ್ಹ. ಜನಿಸಿದ ಮೇಲೆ

ಒಂದಿಲ್ಲೊಂದು ಮೋಹ ಆವರಿಸಿರುತ್ತದೆ. ತಪೋ ನಿರತ ಯೋಗಿಗೂ  ತನ್ನ ಆಶ್ರಮ ,ತನ್ನ ಶಿಷ್ಯರು

ಎನ್ನುವುದು ಕಾಡುತ್ತಲೇ ಇರುತ್ತದೆ. ಸಾಮಾನ್ಯನಂತೂ ಮೋಹದಲ್ಲೇ  ಜೀವಿಸಿರುತ್ತಾನೆ. ಏನು

ಬಿಟ್ಟರೂ  ಧನ ಮೋಹ ಬಿಡದಲ್ಲ .

ನಿರ್ಮೋಹಿಗೆ  ಜಗವೇ ಮನೆ.

ಮೋಹವಿಲ್ಲದ ಬದುಕು ನಮಗಿರಲಿ.

ಮಂಗಳವಾರ, ಆಗಸ್ಟ್ 21, 2012

ನಂಬಿಕೆ

ಈ ಜಗತ್ತು  ನಿಂತಿರುವುದೇ  ನಂಬಿಕೆಯ  ಮೇಲಲ್ಲವೇ?   ನಾವು ನಂಬುವ ದೇವರು ನಮ್ಮನ್ನು ಕಾಪಾಡುವ 

ಎನ್ನುವ ನಂಬಿಕೆಯಿಂದಲೇ  ದಿನ ಕಳೆಯುತ್ತಿದೆ. ಹೌದು ನಂಬಿಕೆ ಅತ್ಯಂತ ಬಲಯುತವಾದದ್ದು .ನಾವು 

ನಂಬಬೇಕು.  ಅದು ನಮ್ಮನುಳಿಸುತ್ತದೆ ಎನ್ನುವುದು ಹಳೇಯ  ಮಾತು. ರೋಗಿಯೊಬ್ಬ ಔಷಧಿ ಸೇವಿಸುವಾಗ 

ಅದರಲ್ಲಿ  ನಂಬಿಕೆ ಇಡದಿದ್ದರೆ  ಗುಣ ಕಾಣುವುದು  ಅಸಾದ್ಯ. ಅಂತೆಯೇ   ನಾಳೆ ಎನ್ನುವ ಭರವಸೆಯೇ 

ನಮ್ಮನ್ನು ಉಳಿಸಿರುವುದು. ನಾಳೆ ಎನ್ನುವುದೊಂದಿಲ್ಲದ್ದಿದ್ದರೆ  ಈ ಜಗತ್ತು ಹೀಗಿರುತ್ತಿತ್ತೆ? ಸಾದ್ಯವೇ ಇಲ್ಲ .

ಪ್ರತಿಯೊಬ್ಬರೂ ತಮ್ಮ ಮಾತು ಕೃತಿಗಳಿಂದ  ಬೇರೆಯವರನ್ನು ನಂಬಿಸಲು ಯತ್ನಿಸುತ್ತಲೇ ಇರುತ್ತಾರೆ ಮತ್ತು 

ತಾವು  ನಂಬುತ್ತಲು  ಇರುತ್ತಾರೆ. ನೋಡಿ ದೇವ ಮಾನವರೆಂದು ಹೇಳುವ ಕೆಲವರು ತಮ್ಮನ್ನು ದೇವರೆಂದೇ 

ನಂಬುತ್ತಲಿರುತ್ತಾರೆ ಅಥವಾ ಬೇರೆಯವರನ್ನು ನಂಬಿಸುತ್ತಿರುತ್ತಾರೆ . ಈ ನಂಬಿಕೆಯೇ ಇಂದು
ಬಾಹ್ಯಾಕಾಶದಲ್ಲಿಯೂ ಜೀವಿಗಳನ್ನು ಹುಡುಕಿಸುತ್ತಿರುವುದು .  ಮಂಗಳನಲ್ಲಿ ನೀರಿದ್ದೀತೇ ಎಂದು

ತಡಕಾಡುತ್ತಿರುವುದು ಇಂದು ನಂಬಿಕೆ ಎನ್ನುವುದು ನಮ್ಮಿಂದ  ಅಸಾದ್ಯವಾದುದನ್ನೆಲ್ಲ ಮಾಡಿಸುತ್ತಲಿದೆ.

ನಂಬಿಕೆಯ  ಮೇಲೆ ನಂಬಿಕೆಯಿರಲಿ.


ಶುಕ್ರವಾರ, ಆಗಸ್ಟ್ 17, 2012

ಸೆಳೆತ:

ಸೆಳೆತ:

ಸೆಳೆತ ಅಂದರೆ ಆಕರ್ಷಣೆ. ಹೆಣ್ಣು ಹೊನ್ನು  ಮಣ್ಣು  ಈ ಮೂರು ಮೊದಲಿನ ನಂಬಿಕೆ. ನಂತರದಲ್ಲಿ ಹಲವರು

 ಮನುಷ್ಯನ ಅಗತ್ಯಗಳಿಗೆ  ಸೇರಿದಂತೆಲ್ಲಾ  ಆಕರ್ಷಣೆಯ ಮೂಲಗಳೂ  ಹೆಚ್ಚುತ್ತ ಹೋದವು

 ಒಬ್ಬಬ್ಬರಿಗೆ ಒಂದೊಂದು ಸೆಳೆತ.ಇದು  ನಮ್ಮಲ್ಲಿಯ  ಮನೋಧಾಷ್ಟಿಕತೆಯನ್ನು  ಪ್ರತಿಬಿಂಬಿಸುತ್ತದೆ
.
ಸಾಮಾನ್ಯವಾಗಿ        ನಾವೆಲ್ಲರೂ ಒಂದಿಲ್ಲೊಂದು ಸೆಳೆತಕ್ಕೆಒಳಗಾದವರೇ. ಆದರೆ ಅದಕ್ಕೆ

 ಗುಲಾಮರಾಗಿಲ್ಲವೆಂದರೆ ನಾವು ನಮ್ಮ ಹಿಡಿತದಲ್ಲಿದ್ದೇವೆಂದರ್ಥ .ಗುರುವೊಬ್ಬ ಸರ್ವ ಸಂಗ 

 ಪರಿತ್ಯಾಗಿಯಾಗಿದ್ದಾನೆಂದು   ತಿಳಿದರೂ  ಆತನ ಬಯಕೆಗಳು ಸತ್ತಿಲ್ಲ.

                
 ಯಾವುದಾದರು ಗುರಿಗಾಗಿ ಆತನ  ಪ್ರಯತ್ನ ನಡದೇ ಇರುತ್ತದೆ .

  ಅಂದರೆ  ಸೆಳೆತವಿಲ್ಲದವನು ಇಲ್ಲವೆಂದರ್ಥ.  ದೇವರಿಗೂ  ಪ್ರಪಂಚದ,ಭಕ್ತರ ಸೆಳೆತವಿದ್ದೇವಿರುತ್ತದೆ

. ನಮ್ಮ ಪಯಣದ ದಾರಿ ಸರಿಯಾಗಿರಲಿ. ನಾವು ಸರಿಯಾಗಿರುತ್ತೇವೆ. 

ಅಲ್ಲವೇ?

ನಮ್ಮೊಳಗಿನ  ದೇವರು ನಮ್ಮನ್ನು ಮುನ್ನಡೆಸಲಿ.

ಶುಕ್ರವಾರ, ಆಗಸ್ಟ್ 10, 2012

ಹೊಸ ಬೆಳಕಿನೊಂದಿಗೆ

ಹೊಸ ಬೆಳಕಿನೊಂದಿಗೆ   ದಿನವನ್ನು ಪ್ರಾರಂಭಿಸುತ್ತಿದ್ದೇನೆ .

ಅಲಭ್ಯದಲ್ಲಿ  ತಾನೆ  ಲಭ್ಯತೆಯ ಕುರಿತಾಗಿ ಸೆಣಸುವುದು ?  ಕತ್ತಲಲ್ಲಿ  ಕುಳಿತಾಗ ಬೆಳಕನ್ನು  ಹಂಬಲಿಸುತ್ತೇವೆ.

ಅದೇ ತಾನೆ ಅಲಭ್ಯ.ಆದ್ದರಿಂದಲೇ   ಬೆಳಗನ್ನು ಆ ದಿನದ ಲಭ್ಯತೆಯ ಆಶಯದೊಂದಿಗೆ ಆರಂಭಿಸುವುದು.

 ಇಂದು ನಮಗೆಟಕುವ  ಚಿಂತನೆಗಳು ಮಾತ್ರ ನಮ್ಮ ಮುಂದಿರುತ್ತವೆ.ಬಯಸಿದ್ದು ಸಿಗದಾಗ  ನಿರಾಸೆಯ

 ದುಃಖ ಆವರಿಸುವುದು. ಆದ್ದರಿಂದ  ಶುಭವನ್ನು ಬಯಸೋಣ. ಹಾರೈಸೋಣ.ಹಾಗಾದರೆ  ಆಸೆ ಪಡುವುದು

 ತಪ್ಪೇ?  ಖಂಡಿತ ಇಲ್ಲ. ನಮ್ಮ ಪರಿಧಿಯೊಳಗಣ  ಆಸೆ ತಪ್ಪಲ್ಲ. ಆಕಾಶವನ್ನೇ ಕೈಯೊಳಗೆ ಹಿಡಿಯುವ ಆಸೆ

  ಆಸೆಯಾಗದು .ಅತಿಯಾಸೆಯಾದೀತು. ತಾಸಿನಲ್ಲಿ ಭೂಮಿಯನ್ನೆಲ್ಲಾ ಸುತ್ತಲಾಗದು . ವ್ಯವಸ್ತಿತ

 ತಯಾರಿಗಳೊಂದಿಗೆ ಸಾದ್ಯವಾದೀತಲ್ಲವೇ?  ಅದೇ  ದೂರದರ್ಶಿತ್ವ .ರಾಜನೊಬ್ಬ ಕೋಟೆಯನ್ನು

ಗೆಲ್ಲಬೇಕಾದಾಗ   ಕೋಟೆಯಲ್ಲಿನ ಆಹಾರ ,ನೀರಿನ ಲಭ್ಯತೆಯನ್ನು ತುಂಡರಿಸಿದಾಗ  ಆತನು ಆ ಕೋಟೆಯನ್ನು

 ಗೆಲ್ಲಲುಮುನ್ನುಗ್ಗಬಹುದು. ಇಲ್ಲವಾದಲ್ಲಿ  ಕೋಟೆಯೊಳಗಿನ  ಸೈನ್ಯ ಬಗ್ಗದು .  ಇದನ್ನೇ ಜೀವನಕ್ಕೂ

 ಅನ್ವಯಿಸಬಹುದಲ್ಲವೇ? ನಮ್ಮೊಳಗಿನ  ದುರಾಸೆಗಳನ್ನುದೂರವಿಟ್ಟಾಗ ಮಾತ್ರ  ನಾವು ಜೀವನದಲ್ಲಿ

 ಗೆಲ್ಲಬಹುದು.

ಶುಭವಾಗಲಿ .


ನನ್ನ ಬ್ಲಾಗ್ ಪಟ್ಟಿ